ಯಕ್ಷದೇವರ ಅಯನ ಸಾಧಕ ಸಮ್ಮಾನ
ಲೇಖಕರು : ವಾದಿರಾಜ ಕಲ್ಲೂರಾಯ
ಶನಿವಾರ, ಜುಲೈ 4 , 2015
|
ಜುಲೈ 04, 2015
|
ಯಕ್ಷದೇವರ ಅಯನ ಸಾಧಕ ಸಮ್ಮಾನ
ಮೂಡುಬಿದಿರೆ :
ಸಂಗೀತ ಮತ್ತು ಸಾಹಿತ್ಯ ಸರಸ್ವತಿ ಮಾತೆಯ ಪವಿತ್ರ ಪಯೋಧರಗಳೆಂದು ಭಾವಿಸಿ ಕಲೆಯ ಮೂಲ ಆಶಯಕ್ಕೆ ಭಂಗ ಬಾರದ ಹಾಗೆ ಹೊಸತನ್ನು ಸೇರಿಸಿಕೊಳ್ಳುತ್ತ ಕಲೆಯ ಸಂವಹನ ಕಾಯಕವನ್ನು ಮಾಡುತ್ತಿರುವ ಸಂಸ್ಥೆ ಯಕ್ಷದೇವ ಮಿತ್ರ ಕಲಾಮಂಡಳಿ ಬೆಳುವಾಯಿ ತನ್ನ 18ನೇ ವರ್ಷದ ಯಕ್ಷಾಯನ ಕಾರ್ಯಕ್ರಮದಲ್ಲಿ ಈರ್ವರು ಸಾಧಕರನ್ನು ಯಕ್ಷದೇವ ಪ್ರಶಸ್ತಿ ನೀಡಿ ಜುಲೈ 5ರಂದು ಗೌರವಿಸುತ್ತಿದೆ.
|
ಕುರಿಯ ಗಣಪತಿ ಶಾಸ್ತ್ರಿ
|
ಕುರಿಯ ಗಣಪತಿ ಶಾಸ್ತ್ರಿ
ಕುರಿಯ ರಾಮಶಾಸ್ತ್ರಿ ಹಾಗೂ ಗಂಗಮ್ಮ ದಂಪತಿಯ ಸುಪುತ್ರರಾದ ಇವರಿಗೆ ಯಕ್ಷಗಾನ ಪ್ರೀತಿ "ಅಭಿಜಾತ್ಯ'. ಅಗರಿ, ಮಂಡೆಚ್ಚ, ಕಡತೋಕ ಭಾಗವತರಿಂದ ಸ್ಫೂರ್ತಿ ಪಡೆದು ಗುರು ನೆಡ್ಲೆ ನರಸಿಂಹ ಭಟ್ಟರಿಂದ ಪಕ್ವಗೊಂಡು ಯಕ್ಷಗಾನದ ಸೌಂದರ್ಯವನ್ನು ಸಾಕಾರಗೊಳಿಸುವ ಭಾಗವತರಾಗಿ ಸಿದ್ಧಿಯಿಂದಲೇ ಪ್ರಸಿದ್ಧರು.
ಕಲ್ಲಾಡಿ ವಿಠಲ ಶೆಟ್ಟರ ಯಜಮಾನ ಪ್ರೀತಿಯಿಂದ ಕಟೀಲು ಮೇಳದಲ್ಲಿ ಭಾಗವತರಾಗಿ ಕಲಾಸೇವೆ ಗೈಯುತ್ತಾ ಕಟೀಲು ಮೇಳದಲ್ಲಿ ಪದ್ಯಾಣ ಶಂಕರನಾರಾಯಣ ಭಟ್ಟರ ಸಾಹಚರ್ಯದೊಂದಿಗೆ ಪುರಾಣಲೋಕದ ತತ್ವಗಳ ಪ್ರಯೋಗ ದರ್ಶನ ಮಾಡಿಸಿ ಕಾವ್ಯಭಾಷೆಯ ಕುತೂಹಲಕರ ಸೌಲಭ್ಯ, ಗಣಗಳ ಗೇಯತೆಯನ್ನು ಗಾನಾಭಿವ್ಯಕ್ತಿಯಲ್ಲಿ ಸಜೀವಗೊಳಿಸಿ ಪ್ರಸಂಗ ಭಾವದ ಬಸಿರು ಬತ್ತದ ಹಾಗೆ ಕವಿ ಪ್ರತಿಭೆಗೆ ತನ್ನ ಕಲಾಪ್ರತಿಭೆಯನ್ನು ಸೇರಿಸಿ ಪ್ರೇಕ್ಷಕ ಪ್ರಭುಗಳನ್ನು ಪೌರಾಣಿಕ ಸತ್ಯಗಳಲ್ಲಿ ಮಡಿಯಾಗಿಸಿದವರು.
ಪ್ರಯೋಗಶೀಲ ಭಾಗವತರಾಗಿ ಪ್ರೇಕ್ಷಕರ ಕಲ್ಪನೆಗಳಿಗೆ ಭಾವನೆಗಳಿಗೆ ಸ್ಪಂದಿಸುವ ವೇಷಧಾರಿಗಳನ್ನು ತಿದ್ದುತ್ತ ಗದರಿ ದಷ್ಟೇ ಪ್ರೀತಿಸುವ ಭೀಮ ಹೃದಯಿ. ಯಕ್ಷಗಾನ ಕಲಾರಂಗ ದಲ್ಲಿ ಕುರಿಯ ಶೈಲಿಯನ್ನು ಭದ್ರಗೊಳಿಸಿದ ಅಪೂರ್ವ ಅನುಭವದ ಆಗರ. ರಂಗತಂತ್ರಗಳ ರಸವಿಶೇಷಗಳ ಸಾಗರ.
|
ಗೇರುಕಟ್ಟೆ ಗಂಗಯ್ಯ ಶೆಟ್ಟಿ
|
ಗೇರುಕಟ್ಟೆ ಗಂಗಯ್ಯ ಶೆಟ್ಟಿ
ಅಮ್ಮು ಶೆಟ್ಟಿ ಹಾಗೂ ಕಮಲಮ್ಮ ದಂಪತಿಗೆ ಮಗನಾಗಿ ಜನಿಸಿ ಬಾಲ್ಯದಿಂದಲೇ ಯಕ್ಷಗಾನಾಸಕ್ತಿ ಬೆಳೆಸಿಕೊಂಡು ಪಡ್ರೆ ಚಂದು ಅವರಲ್ಲಿ ಶಿಷ್ಯತ್ವ ಸ್ವೀಕರಿಸಿ ಕಲಾ ಸೇವೆಯ ಕೈಂಕರ್ಯ ತೊಟ್ಟು ತಿರುಗಾಟ ಆರಂಭ. ಕಟೀಲು ಮೇಳದಲ್ಲಿ ನಾಲ್ಕು ದಶಕಗಳ ಸಾರ್ಥಕ ಸೇವೆ. ಬಣ್ಣದ ಕುಟ್ಯಪ್ಪು, ಕದ್ರಿ ವಿಷ್ಣು, ಕೇದಗಡಿ ಗುಡ್ಡಪ್ಪ ಗೌಡರ ವೇಷಗಾರಿಕೆಯ ದಟ್ಟ ಪ್ರಭಾವದಿಂದ ರೂಪುಗೊಂಡು ಸ್ವಂತಿಕೆಯಿಂದಲೇ ಹಲವು ವಿಶಿಷ್ಟತೆಗಳನ್ನು ಹುಟ್ಟು ಹಾಕಿ ನೀರವ ರಾತ್ರಿಗಳನ್ನು ತನ್ನ ಪ್ರತಿಭಾ ಪ್ರಭೆಯಿಂದ ದೀಪ್ತವಾಗಿಸಿದ ಸೃಜನಶೀಲತೆಯ ಮೇರು.
ಬಣ್ಣದ ವೇಷಕ್ಕೆ ಹೇಳಿ ಮಾಡಿಸಿದ ಆಳ್ತನ, ವಿಲಕ್ಷಣ ಆಡಂಬರದ ವಿಳಂಬಿತ ಚಲನೆ, ಬೀಸುಕೈಗಳು. ಅಪೂರ್ವ ಕಂಠಶ್ರೀ, ಪಾತ್ರಸ್ವಭಾವ ತೋರಿಸುವ ಮುಖವರ್ಣಿಕೆ- ಅಭಿನಯ, ಒಪ್ಪ ಓರಣ ವಸ್ತ್ರಾಲಂಕಾರ, ಮಾತು, ಪ್ರಯೋಗ ಶೀಲತೆ ಒಟ್ಟಾದಾಗ ಗಂಗಯ್ಯ ಶೆಟ್ಟರ ವ್ಯಕ್ತಿತ್ವ ಪಡಿಮೂಡುತ್ತದೆ.
ಕಲ್ಲಾಡಿ ವಿಠಲ ಶೆಟ್ಟಿಯವರನ್ನು, ನೆಡ್ಲೆ- ಕುರಿಯ- ಪದ್ಯಾಣದವರ ಹಿಮ್ಮೇಳವನ್ನು ಸ್ಮರಿಸುವ ಮಹಿಷನಿಂದ ರಾವಣನ ತನಕ ವೈವಿಧ್ಯಗಳನ್ನು ಬಣ್ಣಗಳಲ್ಲಿ ತೋರಿ ಸಿದ್ಧಿಯೆಡೆಗೆ ಲಕ್ಷ್ಯವಿಟ್ಟ, ಕಲಾದರ್ಶನದ ಮೂಲಕವೇ ಉಸಿರಾಡುತ್ತಿರುವ ಹೃದಯ ಶ್ರೀಮಂತ.
ಕೃಪೆ :
udayavani
|
|
|